Saturday, January 29, 2011

Monday, January 24, 2011

Udayavani: Kannada-bhimsen joshi- audio

Udayavani: Kannada

Welcome to Prajavani Online-bhimsen joshi

Welcome to Prajavani Online

Welcome to Prajavani Online- bhimsen joshi

Welcome to Prajavani Online

Welcome to Prajavani Online- bheemasen joshi

Welcome to Prajavani Online

Theatre presentation of Mistake


ಮಾಂಟೋನ ಕಥೆಗಳ ಕಥಾಭಿನಯ: ಮಿಸ್ಟೇಕ್
.ಕೆ. ಬೊಳುವಾರು

ಕಗ್ಗತ್ತಲ ಕಾಲದಲ್ಲಿ ಹಾಡುವುದು ಉಂಟೆ
ಹೌದು ಹಾಡುವುದು ಉಂಟು
ಕಗ್ಗತ್ತಲ ಕಾಲವನ್ನು ಕುರಿತು.........
ವಿಶ್ವಮಾನ್ಯ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಬರೆದ ಕವಿತೆಯೊಂದರ ಸಾಲುಗಳಿವು. ಯುದ್ಧ ಸಂದರ್ಭವನ್ನು ಕಗ್ಗತ್ತಲ ಕಾಲವೆಂದು ಆತ ಕರೆದು ಅದೆಷ್ಟೋ ವರುಷಗಳು ಉರುಳಿಹೋಗಿವೆ.

63 ವರ್ಷಗಳ ಹಿಂದೆ ನಡೆದ ದೇಶ ವಿಭಜನೆಯ ಕಾರಣವಾಗಿ ಕತೆಗಾರ ಸಾದತ್ ಹಸನ್ ಮಾಂಟೋ ಹಲವು ಕತೆಗಳನ್ನು ಬರೆಯುತ್ತಾರೆ. ಅವುಗಳಲ್ಲಿ ಮಿಸ್ಟೇಕ್, ಓಪನ್ ಮಾಡು, ಶರೀಫನ್ ಮತ್ತು ಪುರುಷಾರ್ಥ ಕತೆಗಳನ್ನು ಆಯ್ದುಕೊಂಡು ಉಡುಪಿ, ರಥಬೀದಿ ಗೆಳೆಯರು, ನಾಟಕ ಕಲಾವಿದರು ಮಿಸ್ಟೇಕ್ ಹೆಸರಿನ ರಂಗಪ್ರಯೋಗವೊಂದನ್ನು ಬಹು ಪರಿಣಾಮಕಾರಿಯಾಗಿ ಪ್ರಯೋಗಿಸಿದ್ದಾರೆ. (ನಿರ್ದೇಶನ: ಡಾ| ಶ್ರೀಪಾದ ಭಟ್, ಶಿರಸಿ).

ಗೊತ್ತಿದ್ದೂ ಮಾಡಿದ ತಪ್ಪನ್ನು ಗೊತ್ತಿಲ್ಲದೆ ಮಾಡಿದ ತಪ್ಪೆಂದು ತಪ್ಪನ್ನು ಮುಚ್ಚಿಹಾಕಿ ತಪ್ಪುಗಳ ಸರಮಾಲೆಯಲ್ಲಿ ಬೆಂದುಹೋದ ಸಾಮಾನ್ಯ ಜನರ ಬದುಕನ್ನು ಅಷ್ಟೇ ನಿಖರ ಸತ್ಯವಾಗಿ ಬಿಂಬಿಸಿದ ಮಾಂಟೋನ ಕಥೆಗಳನ್ನು ರಥಬೀದಿ ಗೆಳೆಯರು ಕಥಾಭಿನಯವಾಗಿ ಪ್ರಯೋಗಿಸಿದ್ದು ಉಡುಪಿ ಎಂ.ಜಿ.ಎಂ. ಕಾಲೇಜು ರವೀಂದ್ರ ಮಂಟಪದಲ್ಲಿ.

ಮಂಟಪವನ್ನು ಅಚ್ಚುಕಟ್ಟಾಗಿ ಕಪ್ಪು ಪರದೆಗಳಿಂದ ಅಲಂಕರಿಸಿ ಹಿನ್ನೆಲೆಯಲ್ಲಿ ಕಲಾವಿದ ಮೋಹನ್ ಸೋನಾ ಸೃಷ್ಟಿಸಿದ ವಿಶಿಷ್ಟ ಚಿತ್ರ ಕಲಾಕೃತಿಯನ್ನು ಇರಿಸಲಾಗಿತ್ತು. ವಿಭಜನೆಗೆ ಕಾರಣವಾದ ಎರಡು ಬಣ್ಣಗಳನ್ನು ಹೊರತುಪಡಿಸಿ ಜನಸಾಮಾನ್ಯರ ಬದುಕನ್ನು ಕಟ್ಟಿಕೊಡುವಂತೆ ಇತರ ಬಣ್ಣಗಳನ್ನು ಬಳಸಿ ಸಿದ್ಧಪಡಿಸಿದ ಪೈಂಟಿಂಗ್ , ಅದಕ್ಕೆ ಪೂರಕವಾದ ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ಬಿಡಿ ಬಿಡಿ ಕಥೆಗಳಿಗೆ ಪ್ರತ್ಯೇಕ ಅರ್ಥವಂತಿಕೆಯನ್ನು ಒಟ್ಟು ನಾಟಕದಲ್ಲಿ ಹಲವು ಬಗೆಯ ಅರ್ಥಗಳನ್ನು ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರ ಕಲಾಕೃತಿಯೂ ಒಂದು ಪಾತ್ರವಾಗಿ ರಂಗಪ್ರಯೋಗದಲ್ಲಿ ವಿಜೃಂಭಿಸಿದೆ.

ಮೊದಲನೆಯ ಕಥಾ ನಿರೂಪಣೆಗೆ ಮಾತುಗಳ ಬಳಕೆಯಿಲ್ಲ. ಎರಡನೆಯ ಕಥೆಯಲ್ಲಿ ಚಲನೆ, ಶರೀರಭಾಷೆ, ಕೆಲವು ಸಾಲುಗಳನ್ನಷ್ಟೇ ಉಚ್ಚರಿಸುವುದು ಕತೆಯ ಕೊನೆಯಲ್ಲಿ ವಾಚ್ಯವಾಗಿಯೇ ಹೇಳಿ ಒಟ್ಟು ಪರಿಣಾಮವನ್ನು ಕಲಾತ್ಮಕಗೊಳಿಸಿದ ಬಗೆ ಅನನ್ಯ. ಮೂರನೆಯ ಕಥೆಯ ಎಲ್ಲ ಸಾಲುಗಳನ್ನು ನಿರೂಪಿಸುವ ಒಬ್ಬ ನಟ. ಅದನ್ನು ತಾದಾತ್ಮ್ಯದಿಂದ ಅಭಿನಯಿಸುತ್ತ ಜೀವಂತಗೊಳಿಸುವ ಇನ್ನೊಬ್ಬ ನಟ. ಈ ಇಬ್ಬರ ಜುಗಲ್‍ಬಂದಿಯಲ್ಲಿ ವಿಭಜನೆಯ ತಲ್ಲಣಗಳನ್ನು ಪರಿಣಾಮಕಾರಿಯಾಗಿ ಸಂವಹಿಸಲು ಸಂಗೀತದ ಸಹಕಾರ, ಎಲ್ಲವೂ ಸಮರ್ಥ ಸಂವಹನ.

ನಾಲ್ಕನೆಯ ಕಥೆ ನಾಟಕೀಯವಾಗಿ ಆರಂಭಗೊಂಡು ಮೂವರು ಸ್ನೇಹಿತರ ನಡುವಣ ಪ್ರೀತಿ, ಕೋಪ, ಸಂಕಟಗಳ ಮೂಲಕ ವಿಭಜನೆಯ ಕಾರಣವನ್ನು ವಿವರಿಸುತ್ತದೆ. ಕ್ರೌರ್ಯ, ಹಿಂಸೆ, ಅಧರ್ಮಗಳಿಗೆ ವಿಭಜನೆಯೇ ಮೂಲದ್ರವ್ಯವಾದಾಗ ಅದಕ್ಕಿಂತ ದೊಡ್ಡ ಅಮಾನವೀಯ ಕೃತ್ಯ ಇನ್ನೊಂದಿಲ್ಲ ಎಂಬುದನ್ನು ಪ್ರತೀ ಕ್ಷಣವೂ ಈ ನಾಟಕ ಹೇಳುತ್ತಲೇ ಸಾಗುತ್ತದೆ. ಹಾಗಾಗಿಯೇ ಮೊದಲೆರಡು ಕಥೆಗಳ ಪೀಠಿಕೆ ರಂಗವಿಸ್ತಾರಗೊಂಡು ನಾಲ್ಕನೆಯ ಕಥೆಯಲ್ಲಿ ಪರಾಕಾಷ್ಠೆ ಪರಿಣಾಮಕಾರೀ ನಾಟಕವಾಗಿ ಪ್ರದರ್ಶಿತಗೊಂಡಿದೆ. ರಂಗದಲ್ಲಿ ಪ್ರಯೋಗಿಸಲ್ಪಟ್ಟ ಈ ನಾಲ್ಕೂ ಕಥೆಗಳಲ್ಲಿಯೂ ಚಲನೆಯಿದೆ, ಹುಡುಕಾಟವಿದೆ, ಹಿಂಸೆಯಿದೆ, ಅದರೊಳಗೇ ಪ್ರೀತಿಯಿದೆ, ಕಾಳಜಿಯಿದೆ. ಇದಕ್ಕೆ ಪೂರಕವಾಗಿ ಪಾಬ್ಲೊ ನೆರೂದ, ಬ್ರೆಕ್ಟ್ ಶರೀಫ ಮತ್ತು ಸೂಫಿ ಹಾಡಿನ ಸಾಲುಗಳು ಬಳಕೆಯಾಗಿದೆ. ಧ್ವನಿಮುದ್ರಿತ ಮತ್ತು ಜೀವಂತ ಸ್ವರಸಂಗೀತ ನಾಟಕದ ಯಶಸ್ಸಿಗೆ ಕಾರಣವಾಗಿದೆ. (ಸಂಗೀತ ಡಾ| ಶಶಿಕಾಂತ)

ನಿರ್ದೇಶಕರು ಮತ್ತು ನಟ ನಟಿಯರ ರಂಗಭೂಮಿ ಕುರಿತ ಬದ್ಡತೆ, ಸಂಯಮದ ನಟನೆ, ಪೂರಕ ವೇಷಭೂಷಣ, ಪ್ರಸಾಧನ, ರಂಗಪರಿಕರ, ಬೆಳಕು ನಿರ್ವಹಣೆ ಇವೆಲ್ಲವನ್ನೂ ಕಲಾತ್ಮಕವಾಗಿ ನಿರ್ದೇಶಿಸಿದ ನಿರ್ದೇಶಕ ಇವರೆಲ್ಲರೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ನಾಟಕ ವೀಕ್ಷಿಸಿದ ಗೆಳೆಯರೊಬ್ಬರು ಗಂಭೀರವಾಗಿ ಪ್ರತಿಕ್ರಿಯೆ ನೀಡಿದ್ದು ಹೀಗೆ - "ಈ ನಾಟಕ ಉಡುಪಿಯಲ್ಲಿ ಮಾತ್ರವಲ್ಲ ಭಾರತ, ಪಾಕಿಸ್ಥಾನ ಹಾಗೂ ಬಾಂಗ್ಲಾದೇಶಗಳ ಎಲ್ಲ ಹಳ್ಳಿ ಪಟ್ಟಣಗಳಲ್ಲಿಯೂ ಪ್ರದರ್ಶನಗೊಳ್ಳಬೇಕಾಗಿದೆ. ಇವತ್ತಿನ ದಿನಗಳಲ್ಲಿ ಅಂತಹ ತುರ್ತಿದೆ".

ಇದು ರಥಬೀದಿ ಗೆಳೆಯರು ನಡೆಸಿದ ರಂಗ ಪ್ರಯತ್ನಕ್ಕೆ ಪ್ರಾಪ್ತಿಯಾದ ಶಹಭಾಸ್‍ಗಿರಿ ಎಂದೇ ಹೇಳಬೇಕಾಗಿದೆ.

 (ಉದಯವಾಣಿ 23-07-2010)




 

Yaake Mookanadyo Guruve nii - Bhimsen Joshi

Thursday, January 20, 2011

Othello Movie Trailer

The Hindu : Friday Review Delhi / Events : Tagore revisited

The Hindu : Friday Review Delhi / Events : Tagore revisited

Aravindan - Documentary By Shaji Karun (1)

Aravindan - Documentary By Shaji Karun (2)

The Hindu : Friday Review Thiruvananthapuram : Auteur par excellence

The Hindu : Friday Review Thiruvananthapuram : Auteur par excellence-g aravindan- malayalam flm director

Mistake, a drama in Kannada

ಮನುಷ್ಯತ್ವ ಆಳವನ್ನು ಕೆದಕಿದ "ಮಿಸ್ಟೇಕ್" ನಾಟಕ: ರಂಗವ್ಯಾಕರಣಕ್ಕೆ ಬಣ್ಣದ ಹೊಸ ವ್ಯಾಖ್ಯಾನ

ಜಿ.ಪಿ. ಪ್ರಭಾಕರ

ಉರ್ದು ಸಾಹಿತ್ಯದ ಖ್ಯಾತ ಕತೆಗಾರ ಸಾದತ್ ಹಸನ್ ಮಾಂಟೋನ ನಾಲ್ಕು ಕಥೆಗಳನ್ನು ಹೆಣೆದು ನಾಟಕರೂಪದಲ್ಲಿ ಅಭಿನಯಿಸಿ ಹೊಸ ಆಶಯ ಕಟ್ಟುವ ಪ್ರಯತ್ನ ಇತ್ತೀಚಿಗೆ ಎಂ.ಜಿ.ಎಂ. ಕಾಲೇಜಿನಲ್ಲಿ ನಡೆಯಿತು. "ಮಿಸ್ಟೇಕ್" ಎಂಬ ಹೆಸರಿನಲ್ಲಿ ರೂಪತಳೆದ ಈ ನಾಟಕ ಉಡುಪಿ ರಥಬೀದಿ ಗೆಳೆಯರ ಸಂಘಟನೆಯ ಆಶ್ರಯದಲ್ಲಿ ಜರುಗಿತು. ಖ್ಯಾತ ಯುವನಿರ್ದೇಶಕ ಡಾ| ಶ್ರೀಪಾದ ಭಟ್ ನಿರ್ದೇಶಿಸಿದ ಈ ನಾಟಕ ಪ್ರಸ್ತುತ ದೇಶದ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೋಮುವಾದದ ಹಿನ್ನೆಲೆಯಲ್ಲಿ ಭಾರೀ ಸಮಕಾಲೀನವೆನಿಸಿತು.
ಮಾಂಟೋ 1947ರ ಭಾರತ ಪಾಕಿಸ್ತಾನ ವಿಭಜನೆಯ ಕರಾಳ ನೋವುಂಡವರು. ಅವರ ಎಲ್ಲಾ ಕಥೆಗಳಲ್ಲೂ ದೇಶ ವಿಭಜನೆಯ ದುರಂತದ ಎಳೆಗಳು ಮಾನವೀಯ ನೆಲೆಯಲ್ಲಿ ವಿಶಿಷ್ಟ ರೂಪಕ ಶಕ್ತಿಯನ್ನು ಪಡೆದಿವೆ. ಹಿಂಸೆ ಮತ್ತೆ ಮತ್ತೆ ಮಾಂಟೋನನ್ನು ಕಾಡುತ್ತದೆ. ಆದ್ದರಿಂದಲೇ ಮಾಂಟೋ ಹಿಂಸೆಯನ್ನು ಮನುಷ್ಯ ಪ್ರಜ್ಞೆಯ ಒಳಗಡೆಯೇ ಶೋಧಿಸುತ್ತಾನೆ. ಮನುಷ್ಯನ ಆಳದಲ್ಲಿ ಹುದುಗಿರುವ ಹಿಂಸಾರತಿ, ಕ್ರೌರ್ಯ ಎಲ್ಲವೂ ಇಲ್ಲಿ ಮಾಂಟೋನ ಭಾಷೆಯಲ್ಲಿ ಹೊಸರೂಪ ಪಡೆಯುತ್ತದೆ. ನಾಟಕದ ಹೆಸರೇ ಸೂಚಿಸುವಂತೆ ಮಿಸ್ಟೇಕ್ ಇಲ್ಲಿ ಮತ್ತೆ ಮತ್ತೆ ಎಲ್ಲಾ ನೆಲೆಗಳಲ್ಲೂ ವಿಸ್ತಾರಗೊಳ್ಳುವ ಒಂದು ರೂಪಕ. ವಿಭಜನೆಯ ಒಂದೊಂದು ತಪ್ಪುಗಳು ಇನ್ನೊಂದು ತಪ್ಪಿಗೆ ಮುನ್ನುಡಿಯಾಗುವ ರೀತಿ ಇಲ್ಲಿ ದೇಹಭಾಷೆಯ ಮೂಲಕ ಸಮರ್ಥವಾಗಿ ಮೂರ್ತರೂಪ ಪಡೆದಿದೆ. ಇಲ್ಲೆಲ್ಲಾ ನಿರ್ದೇಶಕರ ಪ್ರತಿಭೆ ಅಸಾಧಾರಣ್ವಾಗಿ ಮೆರೆದಿದೆ ಎನ್ನಬಹುದು. ದೇಶ ವಿಭಜನೆಯ ದುರಂತ ಕಥೆಯಲ್ಲಿ ಕಳೆದುಹೋದ ನೋವಿನ ಧ್ವನಿಗಳನ್ನು ಕೇಳಿಸುವ, ಅದಕ್ಕೆ ರಂಗರೂಪ ಕೊಡುವ ನಿರ್ದೇಶಕರ ಪ್ರಯತ್ನ ಯಶಸ್ವಿಯಾಗಿದೆ. ಹಿಂಸೆಯನ್ನು ಆಳವಾಗಿ ಅನುಭವಿಸುತ್ತಾ ಮೌನದಲ್ಲಿ ಧ್ಯಾನಿಸುವಂತೆ ಮಾಡುವ ಇಡೀ ನಾಟಕದಲ್ಲಿ ಬಣ್ಣಗಳ ಬಳಕೆ ಅಸಾಧಾರಣವಾಗಿ ಮೂಡಿಬಂದಿದೆ.
ರಂಗಕ್ರಿಯೆ ಎನ್ನುವುದು ದೇಹದಿಂದಲೇ ಹುಟ್ಟುವ ವಿಶಿಷ್ಟ ಭಾಷೆ. ರಂಗಭೂಮಿಯಲ್ಲಿ ತಾಂತ್ರಿಕತೆ ಅತ್ಯಾಧುನಿಕತೆ ಹೆಚ್ಚು ಬಳಕೆಯಾದಾಗ ಮೂಲ ರಂಗಕ್ರಿಯೆಯನ್ನು ಸೃಜಿಸುವ ದೇಹವೇ ಅಲಕ್ಷಿತವಾಗುತ್ತದೆ. ಆದ್ದರಿಂದ ಇಡೀ ಪ್ರಯೋಗದುದ್ದಕ್ಕೂ ನಿರ್ದೇಶಕರು ದೇಹ ಭಾಷೆಯನ್ನು ಬೇರೆ ಬೇರೆ ಲಯಗಳಲ್ಲಿ ಬಳಸುವ ಪ್ರಯತ್ನ ಮಾಡಿದ್ದಾರೆ. ಪ್ರಬುದ್ಧ ರಂಗವ್ಯಾಕರಣವನ್ನು ಬಿಂಬಿಸಹೊರಟಂತೆ ಕಾಣುವ ನಿರ್ದೇಶಕರ ಕನಸುಗಳಿಗೆ ಜೀವ ತುಂಬುವುದು ಮೋಹನ್ ಸೋನಾ ಅವರ ಅದ್ಭುತ ವರ್ಣ ವಿನ್ಯಾಸ, ವಸ್ತ್ರ ವಿನ್ಯಾಸ.
ಸೋನಾ ಅವರೇ ಹೇಳುವಂತೆ ಕಾಡುವ ಅನಿಷ್ಟಗಳು ಕೆನ್ನೇರಳೆಯಾಗಿ, ಹಳದಿ ಗೊಂದಲವಾಗಿಯೂ, ಕಂದು ಬಣ್ಣ ಧ್ಯಾನದ ನೀರವ ಮೌನವನ್ನು ರಂಗಕ್ಕೆ ಹರಡುತ್ತದೆ. ಹಸಿರು ಅದಮ್ಯ ಬಯಕೆಯಾಗಿ, ಕೆಂಪು ಮಣ್ಣು ಮತ್ತು ಹಸಿರು ಗೊಬ್ಬರ ನೆಲದ ಚೈತನ್ಯದ ಸಂಕೇತವಾಗಿ ಮೂಡಿಬಂದಿರುವುದು ಇಡೀ ನಾಟಕಕ್ಕೆ ಸಂಕೇತಗಳ ಹೊಸ ಗಾಂಭೀರ್ಯ ತಂದುಕೊಡುತ್ತದೆ. ಹೀಗೆ ಬಣ್ಣದ ಆಟ ಉದ್ದಕ್ಕೂ ನಡೆಯುವುದು ಅವರ್ಣನೀಯ ಕಾವ್ಯಶಕ್ತಿಯನ್ನು ತಂದಿದೆ. ಪ್ರೀತಿಯನ್ನು ಒಡಲಲ್ಲಿಟ್ಟುಕೊಂಡು ಹಿಂಸೆಯ ವಿಕಾರವನ್ನು ಹೊರಹಾಕುವ ಮಾನವೀಯ ತುಡಿತವನ್ನು ಪ್ರಯೋಗ ಒಳಗೊಳ್ಳುತ್ತದೆ. ಇಡೀ ನಾಟಕದುದ್ದಕ್ಕೂ ಇದು ಸ್ಥಾಯಿಯಾಗಿ ಹರಿಯುತ್ತದೆ

ತನ್ನ ಕುಟುಂಬದ ಮೇಲಿನ ಅತ್ಯಾಚಾರಕ್ಕೆ ಪ್ರತಿಯಾಗಿ ಖಾಸಿಂ ನಡೆಸುವ ಅತ್ಯಾಚಾರ ದೃಶ್ಯವಂತೂ ಸಂತೋಷ್‌ಕುಮಾರ್ ಪಟ್ಲರವರ ಅಭಿನಯದಲ್ಲಿ ಧ್ವನಿಪೂರ್ಣವಾಗಿ ವ್ಯಕ್ತವಾಯಿತು. ಬಟ್ಟೆಯನ್ನು ಹರಿದೆಸೆಯುತ್ತಾ ವಿಲಕ್ಷಣವಾಗಿ ವರ್ತಿಸಿದ ರೀತಿಯಂತೂ ಹಿಂಸೆಯ ಆಳದಲ್ಲಿ ಮನುಷ್ಯನ ಸ್ಥಿತಿ ಬಗ್ಗೆ ಮಮ್ಮಲ ಮರಗುವಂತೆ ಮಾಡುತ್ತದೆ. ಸಕೀನಾಳ ತಂದೆ (ದಿವಾಕರ ಕಟೀಲು) ಮಗಳ ಬಟ್ಟೆ ಹಿಡಿದುಕೊಂಡು ಆಕ್ರಂದಿಸುವ ದೃಶ್ಯಾಭಿನಯ ಹಾಗೆ ಸೈನಿಕರಲ್ಲಿ ಮಗಳನ್ನು ಹುಡುಕಿಕೊಡಿ ಎಂದು ಗೋಗರೆವುದು ಪ್ರೇಕ್ಷಕರಲ್ಲಿ ಕಣ್ಣೀರು ತರಿಸಿತು. ಇಲ್ಲಿ ಸೈನಿಕರು ಬಳಸಿದ ದೊಣ್ಣೆಗಳು, ತಲೆಗೆ ಕಟ್ಟಿದ ಕೇಸರಿ ಬಟ್ಟೆಗಳು ಹಿಂದೂ ಸಂಘಟನೆಗಳ ಉಗ್ರತೆಯ ರೂಪಕವಾಗಿಯೂ ಕಂಡಿತು. ಸಕೀನಾಳ ಶರೀರವನ್ನು ಹೊತ್ತೊಯ್ಯುವಾಗ ಏಸು ಶಿಲುಬೆ ಹೊತ್ತಂತೆ ತೋರಿಸುವುದರಲ್ಲೂ ಮನುಷ್ಯತ್ವದ ಲೇವಡಿ ಹೊಸ ಆಯಾಮ ಪಡೆಯುತ್ತದೆ.
ರಂಗದ ಸಮೂಹ ಕ್ರಿಯೆಯಲ್ಲಿ ನಟರು ಬಣ್ಣದ ಜೊತೆಗೆ ಬೆರೆತಾಗ ಹೊಸ ರಂಗಾನುಭವ ಉಂಟುಮಾಡಿತು ಎನ್ನಬಹುದು. ನಾಟಕದ ಕೊನೆಯ ಭಾಗದ ಕಥೆಯನ್ನು ಇಡೀ "ಮಿಸ್ಟೇಕ್" ನಾಟಕದ ಆಶಯದ ಕೇಂದ್ರವಾಗಿ ಬೆಳೆಸಿದಂತಿದೆ. ಇಡೀ ನಾಟಕವನ್ನೇ ಗೆಲ್ಲಿಸಿದ ದೃಶ್ಯಗಳು ಇಲ್ಲೇ ಇದ್ದವು.
ಸಂತೋಷ್ ನಾಯಕ್ ಪಟ್ಲಾ, ದಿವಾಕರ ಕಟೀಲು, ಸಂತೋಷ್ ಶೆಟ್ಟಿ ಹಿರಿಯಡ್ಕ, ಉದ್ಯಾವರ ನಾಗೇಶ್ ಕುಮಾರ್, ವಿನಯ ಸುವರ್ಣ ಕೆ, ಭಾಗ್ಯಲಕ್ಷ್ಮೀ ಅಭಿನಯ ವಿಶೇಷ ಗಮನ ಸೆಳೆಯಿತು. ಕಥಾವಸ್ತುವಿಗೆ ಆಪ್ತವಾಗಿ ಬಂದ ಡಾ. ಶಶಿಕಾಂತ ಕೆ. ಅವರ ಹಿನ್ನೆಲೆ ಸಂಗೀತ ನಾಟಕ ಪ್ಲಸ್ ಪಾಯಿಂಟ್. ಬೆಳಕಿನಲ್ಲಿ ರಾಜು ಮಣಿಪಾಲ ಭಾರೀ ಜಾಗ್ರತೆ, ಸೂಕ್ಷ್ಮತೆ ವಹಿಸಿದರೂ ಕೆಲೆವೆಡೆ ನಿಧಾನ ಗತಿಯಿಂದಾಗಿ ದುರ್ಬಲವಾಯಿತಾದರೂ ಕೆಲೆವೆಡೆ ಬೆಳಕಿನ ಸಂಯೋಜನೆ ಹೊಸ ಕಾವ್ಯಶಕ್ತಿ ಪಡೆದಿತ್ತು. ಮನುಷ್ಯತ್ವ ಆಳವನ್ನು ಕೆದಕಿದ "ಮಿಸ್ಟೇಕ್" ನಾಟಕ ರಂಗವ್ಯಾಕರಣಕ್ಕೆ ಬಣ್ಣದ ಹೊಸ ಆಯಾಮವನ್ನೇ ನೀಡಿತ್ತು.


 (ಪ್ರಜಾವಾಣಿ - 2010)


 
 

Tuesday, January 18, 2011

Rathabeedi Geleyaru of Udupi

ಉಡುಪಿಯ ರಥಬೀದಿ ಗೆಳೆಯರು

ಡಿ. ಆರ್.ನಾಗರಾಜ್


ಪುಟ್ಟ ಊರಿನಲ್ಲಿದ್ದೂ ಇಡೀ ವಿಶ್ವಕ್ಕೆ ಅಧಿಕೃತವಾಗಿ ಸ್ಪಂದಿಸುವ ರೀತಿಗೆ ಕರ್ನಾಟಕದಲ್ಲಿ ಅತ್ಯುತ್ತಮ ಮಾದರಿ ಎಂದರೆ ರಥಬೀದಿ ಗೆಳೆಯರ ಒಬ್ಬೊಬ್ಬರ ಮುಖಗಳೂ ಎದುರಿಗೆ ಬರುತ್ತಿವೆ. ಸಾಮಾನ್ಯವಾಗಿ ಎಲ್ಲ್ರರೂ ಹಸನ್ಮುಖಿಗಳು, ಸಜ್ಜನರು. ಸಂಜೆಯಾದ ಮೇಲೆ ನಮ್ಮ ಗುಂಡು ಹಾಕುವ ಅಭ್ಯಾಸಕ್ಕೆ ಕೊಂಚ ಬೆಚ್ಚಿ, ಕೊಂಚ ನಾಚಿ, ಕೊಂಚ ಪುಲಕಗೊಂಡು ಕಂಪನಿ ಕೊಡುವ ಗೆಳೆಯರು ಇವರು. (ಅಥವಾ ಕೆಲವರು ಮಾತ್ರ ಕಂಪೆನಿ ಕೊಡುತ್ತಾರೆ). ಗೆಳೆಯರ ಬಹುರೂಪೀ ಚಟುವಟಿಕೆಗಳಿಗೆ ನಾನು ಬೆರಗಾಗಿದ್ದೇನೆ. ಅಷ್ಟಮಠದ ನಿಂತ ನೀರಿನ ವಾಸದಲ್ಲೂ ಹೊಸದಕ್ಕೆ ಹಾತೊರೆವ ಈ ಗುಂಪು ಉಡುಪಿಯನ್ನು ಕ್ರಿಯಾಶೀಲವಾಗಿಸಿದೆ. ಇವರು ಉಡುಪಿಯನ್ನು ತಮ್ಮ ಪ್ರಾಣರಸ ತುಂಬಿದ ಚಾಣದಿಂದ ಕೆತ್ತಿ ಕೆತ್ತಿ ಸದ್ಯಕ್ಕೆ ಸಹನೀಯವಾಗಿಸಿದವರು. ಹೀಗಾಗಿ, ರಥಬೀದಿಯಲ್ಲಿ ಗೆಳೆಯರ ಜತೆ ಓಡಾಡುತ್ತಿದ್ದರೆ ಒಣ ವೈಯ್ಯಾಕರಣಿಗಳು, ನಿಜವಾದ ಪಂಡಿತರು, ಮೋಹಕ ಪಾಷಂಡಿಗಳು, ರಮ್ಯ ಕವಿಗಳು, ಕ್ರಾಂತಿಕಾರೀ ವೇಷದ ಧೂರ್ತರು, ತೀಕ್ಷ್ಣ ಬುದ್ಧಿಯ ಧೀಮಂತರು - ಹೀಗೆ ಹತ್ತು ಹಲವು ಜನ ಎದುರಿಗೆ ಸಿಗುತ್ತಾರೆ.

ರಥಬೀದಿ ಗೆಳೆಯರಲ್ಲಿ ಬಹುಪಾಲು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳಿಂದ ಬಂದವರು. ಮತ್ತು ಆ ಬಗ್ಗೆ ಹೆಮ್ಮೆ ಮತ್ತು ಪಾಪಪ್ರಜ್ಞೆಗಳ ನಡುವೆ ಈ ಗೆಳೆಯರು ತುಯ್ದಾಡುತ್ತಾರೆ. ಆಗಾಗ ಇಲ್ಲಿ ಬ್ರಾಹ್ಮಣೇತರ ಮುಖಗಳೂ ಶೋಭಿಸಿ ರಥ ಎಳೆವ ಕೈಗಳಲ್ಲಿ ಬೇರೆಯವೂ ಸೇರಿವೆ ಎಂಬ ಸಮಾಧಾನವೂ ಸಣ್ಣದಾಗಿ ಮೂಡುತ್ತದೆ.

ನನಗೆ ಪ್ರಾಚೀನ ಊರುಗಳ ಬಗ್ಗೆ ಮಹಾ ಮೋಹ. ಕಾಶಿ, ಉಜ್ಜಯಿನಿ, ಪಾಟಲೀಪುತ್ರಗಳಿಗೆ ಈಗಲೂ ತಮ್ಮದೇ ಆದ ಶೋಭೆಯಿದೆ. ಬ್ರಾಹ್ಮಣ-ಶ್ರಮಣ ಧರ್ಮಗಳ ಬೇರೆ ಬೇರೆ ಲಯಗಳು ಈಗಲೂ ಆ ನಗರಗಳಲ್ಲಿ ಎದ್ದುಕಾಣುತ್ತವೆ. ಕಾಶಿಯಲ್ಲಿ ಮೃತ್ಯು ಮತ್ತು ಮುಕ್ತಿಗಳೆರಡೂ ಒಟ್ಟಿಗೇ ಕಾಡುತ್ತವೆ. ಅರೆಬೆಂದ ಹೆಣಗಳು, ಜಿನುಗುವ ತಾಪಸರು, ಅರೆನಗ್ನ ಭೀಕರ ಮುನಿಗಳು, ಸಂಸ್ಕೃತವನ್ನು ಕುಣಿಸಿ ಮಣಿಸುವ ಪ್ರಕಾಂಡ ಪಂಡಿತರು ಕಾಶಿಯನ್ನು ವಿಕಟ ವಿಲಾಸದ ನಗರಿಯನ್ನಾಗಿ ಮಾಡಿದೆ. ಇಲ್ಲಿರುವ ದೋಮರ, ಸಾಬರ, ಬೆಸ್ತರ, ಗೋಸಾಯಿಗಳ, ಶೂದ್ರಾತಿಶೂದ್ರರ ನದಿಯ ಮೇಲೆ ಕಾಶಿ ಎಂಬ ತೆಪ್ಪ ತೇಲುತ್ತಿದೆ.

ಉಡುಪಿ ಆ ಬಗೆಯದಲ್ಲ. ಕಾಶಿ ಹಲಬಗೆಯ ಉನ್ಮತ್ತ ಒತ್ತಡಗಳಿಗೆ ಮಣಿದು ಮಹಾ ಸಂಘರ್ಷಗಳನ್ನು ಕಂಡು ಸಾವನ್ನೆ ಜೀವನವನ್ನಾಗಿ ಮಾಡಿಕೊಂಡಿರುವ ನಗರಿ. ಸಂಪ್ರದಾಯಸ್ಥ ಬ್ರಾಹ್ಮಣರು, ಪಾಷಂಡಿ ಪಂಥಗಳು ಸೆಣಸಿ ಸೆಣಸಿ ಕಾಶಿ ಎಂಥದೊ ಅರೆ ಮಂಪರಿನ ಸ್ಥಿತಿಯಲ್ಲಿ ಸದಾ ತೇಲುತ್ತದೆ. ಉಡುಪಿಗೆ ಆ ಸೌಭಾಗ್ಯವಿಲ್ಲ. ಉಡುಪಿಗೆ ಇರುವ ಸೊಗಸು ಬೇರೆ ರೀತಿಯದು.

ಅನೇಕ ಅರ್ಥಗಳಲ್ಲಿ ಉಡುಪಿಯನ್ನು ಕಟ್ಟಿದವರು ಮಧ್ವಾಚಾರ್ಯರು. ಅವರ ವ್ಯಕ್ತಿತ್ವದಂತೆಯೇ ಇಡೀ ಉಡುಪಿ ಇಂದಿಗೂ ಇದೆ. ದಾರ್ಶನಿಕನೊಬ್ಬ ಇಡೀ ಊರೇ ಆಗಿಬಿಟ್ಟು ಇಂದಿಗೂ ಬದುಕುತ್ತಿರುವ ಇನ್ನೊಂದು ದೊಡ್ಡ ಉದಾಹರಣೆ ಮತ್ತೆ ಎಲ್ಲಿದೆಯೋ ನೋಡಬೇಕು. ನಡ್ಯಂತಿಲ್ಲಾಯ ಮಧ್ಯಗೇಹವಾಗಿ ಬಿಟ್ಟ ಊರು ಇದು. ದಟ್ಟ ಸಾಂಪ್ರದಾಯಕತೆಗೆ ಸಾಧ್ಯವಾಗುವ ಮಂದ್ರಸ್ತರದ ಜೀವಂತಿಕೆಗೆ ಸಾಕ್ಷಿ ಇದು.

ಅಷ್ಟಮಠದಾವರಣಗಳು ತಮ್ಮ ರಥಬೀದಿಯಲ್ಲಿ ಹಿಂದೆ ವೈಚಾರಿಕ - ಸಾಂಕೇತಿಕ ಪ್ರತಿರೋಧವನ್ನು ಕಂಡಿಲ್ಲ ಎಂದಲ್ಲ. ಕಾಶಿಯಲ್ಲಿ ಆದಿಮ ಕಾಳಗಳ ರೀತಿಯಲ್ಲಿ ಸಂಘರ್ಷಗಳು ನಡೆದು ಈಗ ಮೆತ್ತಗಾಗಿ ಬ್ರಾಹ್ಮಣಧರ್ಮ ಗೆದ್ದಿದೆ. ಆದರೆ, ಉಡುಪಿಯಲ್ಲಿ ಅವು ಈ ಹಿಂದೆ - ಜೈನ, ಬೌದ್ಧ ತಾಂತ್ರಿಕ ಅದ್ವಮವಾದಗಳು - ಸಾಂಕೇತಿಕವಾಗಿ ತಮ್ಮ ವಾದ ಮಂಡಿಸಿ ವಾಪಸಾಗುತ್ತಿದ್ದವು. ಆದರೆ ಕೆಲ ಶತಮಾನ ಕಾಲ ಅದೂ ಸ್ಥಗಿತವಾಗಿತ್ತು. "ರಥಬೀದಿ....." ಮತ್ತೆ ಅದನ್ನು ಚಾಲೂ ಮಾಡಿದೆ. ಈ ದೃಷ್ಟಿಯಿಂದ ಉಡುಪಿಯ ಏಳುನೂರು ವರ್ಷಗಳ ಇತಿಹಾಸದಲ್ಲಿ ರಥಬೀದಿ ಗೆಳೆಯರು ಒಂದು ಹೊಸ್ ರೀತಿಯ ಧ್ವನಿ. ಸಂಪ್ರದಾಯಸ್ಥರು ನಾಟಕವನ್ನು ಸಂದೇಹಿಸುತ್ತಾರೆ. ಆದ್ದರಿಂದಲೇ, ಸಾಮಾಜಿಕ ಸಂಹಿತೆಯನ್ನು ಹೇಳುವ ಸ್ಮೃತಿಗಳಲ್ಲಿ ನಟರಿಗೆ ಯಾವಾಗಲೂ ಕೀಳುಜಾತಿಯ ಜತೆಗೆ ಸ್ಥಾನ, ನಾಟಕವಾಡುವ ಗೆಳೆಯರು ಹೀಗಾಗಿ ತಮ್ಮ ಕಲೆಯ ಮೂಲಕವೇ ಸಂಪ್ರದಾಯವನ್ನು ಸಣ್ಣಗೆ ಬೆಚ್ಚಿಸಿದ್ದಾರೆ. ಉಡುಪಿಯಲ್ಲಿ ನಟರು ಹಿಂದೆಯೂ ಇದ್ದರು. ಆದರೆ, ಈ ಬಗೆಯ ಅಸಾಂಪ್ರದಾಯಿಕ ನಾಟಕಗಳನ್ನು ಆಡಿದ ಇತಿಹಾಸವಿತ್ತೆ? ಬಲ್ಲವರು ಹೇಳಬೇಕು.

ರಥಬೀದಿ ಗೆಳೆಯರ ಮಾರ್ದವತೆ ಉಡುಪಿಯ ಮೂಲಶಕ್ತಿಯನ್ನು ಮತ್ತೆ ನೆನಪಿಗೆ ತರುತ್ತದೆ. ರಥಬೀದಿಯಲ್ಲಿ ಮಾರ್ಕ್ಸ್‌ವಾದ ತನ್ನ ಸ್ಫೋಟಕ ಗುಣ ಕಳೆದು ಮೃದು ಮಧುರ ಸೌಂದರ್ಯಾತ್ಮಕ ತತ್ತ್ವವೋ, ಸಾಹಿತ್ಯ ವಿಮರ್ಶೆಯೋ ಆಗುತ್ತದೆ. ಶೂದ್ರರ ಸಿಟ್ಟು ಸಾಂಸ್ಕೃತಿಕ ವೈವಿಧ್ಯತೆ ಆಗಿ ಇಲ್ಲಿ ಪರಿವರ್ತನೆಯಾಗುತ್ತದೆ.

ಅನಂತಮೂರ್ತಿಯವರು ಭಾರತೀಪುರದಲ್ಲಿ ಶೋಧಿಸಿದ್ದು ಇಂಥದೇ ಅನುಭವವನ್ನು ರಥಬೀದಿಯ ವಿಸ್ತೃತ ರೂಪವೇ ಭಾರತೀಪುರ. ಹೀಗಾಗಿ, ಅನಂತಮೂರ್ತಿ ರಥಬೀದಿ ಗೆಳೆಯರ ಗೌರವ ಸದಸ್ಯರಾದದ್ದು ಕಾವ್ಯಾತ್ಮಕ ನ್ಯಾಯವೇ ಸರಿ. ಅವಕಾಶ ಸಿಕ್ಕರೆ ನಾನೂ ಉಡುಪಿಯಲ್ಲಿ ಕೆಲಕಾಲ ನೆಲಸೇನು. ಆದರೆ, ರಥಬೀದಿಯಲ್ಲಿ ಅಲ್ಲ. ಉಡುಪಿಯ ಅಂಚಿನಲ್ಲಿದ್ದು ಮಧ್ಯಗೇಹಕ್ಕೆ ಆತ್ಮೀಯ ಶತ್ರುತ್ವದ ದಾಳಿ ಮಾಡಿಯೇನು.

ಹೀಗೆ ಉಡುಪಿ ಎಂಬ ದ್ವೀಪಕ್ಕೆ ಹೊರ ಜಗತ್ತಿನ ಜನ ಹೋಗಲು ಇರುವ ಏಕೈಕ ಲಾಂಚು ರಥಬೀದಿ ಗೆಳೆಯರು.
 
ಉಡುಪಿಯ ಸಾಂಸ್ಕೃತಿಕ ಕಥನ (೧೯೯೮)
- ನಿ. ಮುರಾರಿ ಬಲ್ಲಾಳ್
ರಥಬೀದಿ ಗೆಳೆಯರು (ರಿ)
ಉಡುಪಿ

Wednesday, January 12, 2011

Rasthrakavi Govinda Pai Samshodhana Kendra Udupi

ADIGAS" POETRY- A REPPRAISAL- RAMACHANDRA DEVA-Rasthrakavi Govinda Pai Samshodhana Kendra Udupi

M. S. Prabhakara

ravindra devavarma-M. S. Prabhakara[kaamaroopi]

ಕನ್ನಡ ಕಾವ್ಯ ಕಣಜ....: ನೋಡಬಾರದು ಚೀಲದೊಳಗನು ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋ...

ಕನ್ನಡ ಕಾವ್ಯ ಕಣಜ....: ನೋಡಬಾರದು ಚೀಲದೊಳಗನು
ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋ...
: "ನೋಡಬಾರದು ಚೀಲದೊಳಗನು ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋಡುವುದುಎಂದಿಗೂ ಉಚಿತವಲ್ಲ ಪುರುಷರೇವ್ಯಾನಿಟಿ ಹೆಸರಿನಲ್ಲಿ ಏನೆಲ್ಲ ಇರಬಹುದುಬಯ..."

Ninasam Tirugata

Ninasam Tirugata 2010-2011 shudra tapasvi- othello